ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುಟ್ಟ ಅಭಿಮಾನಿ, ಕೊಪ್ಪಳದ 6 ವರ್ಷದ ಅಭಿಷೇಕ್ ಎಂಬ ಬಾಲಕ ದರ್ಶನ್ ಸಿನಿಮಾದಲ್ಲಿ ಮಾಡೋ ತರ ಸ್ಟಂಟ್ಸ್ ಮಾಡಲು ಹೋಗಿ ತನ್ನ ಎಡಗಾಲು ಮುರಿದುಕೊಂಡಿದ್ದ.
ಇದೀಗ ಈ ವಿಷಯ ಗೊತ್ತಾದ ತಕ್ಷಣ ಗಾಬರಿಯಾದ ನಟ ದರ್ಶನ್ ಅವರು ಪುಟ್ಟ ಬಾಲಕ ಅಭಿಷೇಕ್ ಗೆ ನೇರವಾಗಿ ದೂರವಾಣಿ ಕರೆ ಮಾಡಿ ತಮ್ಮ ಪುಟ್ಟ ಅಭಿಮಾನಿಯೊಂದಿಗೆ ಮಾತನಾಡಿ ಆತನಿಗೆ ಬುದ್ದಿ ಹೇಳಿ ಸಾಂತ್ವನ ನುಡಿದಿದ್ದಾರೆ.
'ಸದ್ಯಕ್ಕೆ ಬೇರೆ ಭಾಗದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ, ಬೆಂಗಳೂರಿಗೆ ಬಂದ ತಕ್ಷಣ ಕರೆಸಿಕೊಳ್ಳುತ್ತೇನೆ. ಇನ್ನೊಂದು ಬಾರಿ ಈ ತರ ಎಲ್ಲಾ ಅನಾಹುತ ಮಾಡಿಕೊಳ್ಳಬಾರದು, ದರ್ಶನ್ ಅಭಿಮಾನಿಯಾಗಿ ಇನ್ನೊಮ್ಮೆ ಹೀಗೆ ಮಾಡಿಕೊಳ್ಳಬೇಡ' ಎಂದು ದರ್ಶನ್ ತನ್ನ ಕಟ್ಟಾ ಅಭಿಮಾನಿಗೆ ಬುದ್ಧಿವಾದ ತಿಳಿಸಿದ್ದಾರೆ.
ದರ್ಶನ್ ಧ್ವನಿ ಕೇಳಿ ಸಂಭ್ರಮಪಟ್ಟ ಅಭಿಷೇಕ್ ಮತ್ತೊಮ್ಮೆ ತನ್ನ ನೆಚ್ಚಿನ ನಟನಿಗೆ 'ಐರಾವತ' ಚಿತ್ರದ ಡೈಲಾಗ್ ಹೇಳಿ ದರ್ಶನ್ ಅವರನ್ನು ಮೆಚ್ಚಿಸಿದ್ದಾನೆ. ದರ್ಶನ್ ಜೊತೆ ಮಾತನಾಡಿದ ನಂತರ ಬಾಲಕ ಅಭಿಷೇಕ್ ಬೇಗನೆ ಚೇತರಿಸಿಕೊಂಡಿದ್ದಾನಂತೆ.
'ನಾನು ಈಗಾಗಲೇ ಅಭಿಷೇಕ್ ಜೊತೆ ಪೋನ್ ಮೂಲಕ ಮಾತನಾಡಿದ್ದೇನೆ, ಅವನು ಈಗ ಚೆನ್ನಾಗಿದ್ದಾನೆ. ಪ್ರೀತಿಯ ಅಭಿಮಾನಿಗಳೇ, ದಯವಿಟ್ಟು ಯಾರು ಇಂತಹ ಅನಾಹುತಕಾರಿ ಕೆಲಸಗಳಿಗೆ ಕೈ ಹಾಕಬೇಡಿ. ಇವತ್ತು ನಾನು ಈ ಸ್ಥಾನದಲ್ಲಿರಲು ನೀವೇ ಕಾರಣ ಹಾಗಾಗಿ ನೀವ್ಯಾರು ಈ ಬಗೆಯ ಸಾಹಸದ ಪ್ರಯತ್ನ ಮಾಡಬೇಡಿ' ಎಂದು ದರ್ಶನ್ ತಮ್ಮ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.
ನವೆಂಬರ್ 22 ರಂದು 6 ವರ್ಷದ ಬಾಲಕ ಅಭಿಷೇಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಚಿತ್ರದ ಡೈಲಾಗ್ ಅನ್ನು ಹೇಳುತ್ತಾ, ದರ್ಶನ್ ಗಿಂತ ತಾನೇನು ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಮನೆಯ ಮಾಳಿಗೆ ಏರಿ ಅಲ್ಲಿಂದ ಜಂಪ್ ಮಾಡಿದ್ದಾನೆ.
ಹೀಗೆ ಪುಟ್ಟ ಬಾಲಕ ಅಭಿಷೇಕ್ ದರ್ಶನ್ ತರ ಸ್ಟಂಟ್ಸ್ ಮಾಡಲು ಹೋಗಿ ತನ್ನ ಎಡಗಾಲನ್ನು ಮುರಿದುಕೊಂಡಿದ್ದಾನೆ. ಆದ್ರೂ ಅಭಿಮಾನ ಹೋಗಿಲ್ಲ, ಆ ನೋವಲ್ಲೂ ದರ್ಶನ್ ಡೈಲಾಗ್ ಹೇಳುತ್ತಾ ತನ್ನ ನೋವನ್ನು ಮರೆಯುತ್ತಿದ್ದಾನೆ.
ಆದ್ರಲ್ಲೂ, ಇದೀಗ ದರ್ಶನ್ ಅವರ ಜೊತೆ ಮಾತನಾಡಿ ತನ್ನ ನೆಚ್ಚಿನ ನಟನ ಧ್ವನಿ ಕೇಳಿದ ಬಾಲಕ ಅಭಿಷೇಕ್ ಫುಲ್ ಖುಷ್ ಆಗಿದ್ದಾನಂತೆ.
Credits : Filmibeat.com